ಬಜರಂಗಿ ಭಾಯಿಜಾನ್ ಕಬೀರ್ ಖಾನ್ ನಿರ್ದೇಶಿಸಿದ 2015 ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಖಾನ್, ಕೆ.ವಿ.ವಿಜಯೇಂದ್ರ ಪ್ರಸಾದ್ ಮತ್ತು ಪರ್ವೀಜ಼್ ಶೇಖ್ ಬರೆದಿದ್ದಾರೆ. ಸಲ್ಮಾನ್ ಖಾನ್ ಮತ್ತು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ್ಹೋತ್ರಾ ನಟಿಸಿದ್ದಾರೆ. ನವಾಜ಼ುದ್ದೀನ್ ಸಿದ್ದೀಕಿ ಮತ್ತು ಕರೀನಾ ಕಪೂರ್ ಖಾನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೂ ದೇವತೆ ಹನುಮಂತ‍ನ ಉತ್ಕಟ ಭಕ್ತನಾದ ಪವನ್ ಕುಮಾರ್ ಚತುರ್ವೇದಿ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಅವನು ಭಾರತದಲ್ಲಿ ತನ್ನ ಪೋಷಕರಿಂದ ಬೇರ್ಪಟ್ಟ, ಆರು ವರ್ಷದ ಮೂಕ ಪಾಕಿಸ್ತಾನಿ ಮುಸ್ಲಿಂ ಹುಡುಗಿಯನ್ನು ಪಾಕಿಸ್ತಾನದ ಅವಳ ಸ್ವಂತ ಊರಿಗೆ ವಾಪಸು ಕರೆದೊಯ್ಯಲು ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ₹ 90 ಕೋಟಿ ಬಂಡವಾಳದಲ್ಲಿ ತಯಾರಾದ ಈ ಚಿತ್ರದ ಪ್ರಧಾನ ಛಾಯಾಗ್ರಹಣ ನವೆಂಬರ್ 2014 ರಲ್ಲಿ ಪ್ರಾರಂಭವಾಯಿತು. ಛಾಯಾಗ್ರಹಣವನ್ನು ಅಸೀಮ್ ಮಿಶ್ರಾ ಮಾಡಿದ್ದು, ರಾಮೇಶ್ವರ ಎಸ್.ಭಗತ್ ಈ ಚಿತ್ರದ ಸಂಕಲನ ಮಾಡಿದ್ದಾರೆ. ಜೂಲಿಯಸ್ ಪ್ಯಾಕಿಯಮ್ ಹಿನ್ನೆಲೆ ಸಂಗೀತವನ್ನು ನೀಡಿದರೆ, ಚಿತ್ರದಲ್ಲಿರುವ ಹಾಡುಗಳನ್ನು ಪ್ರೀತಮ್ ಸಂಯೋಜಿಸಿದ್ದಾರೆ. ಈ ಚಿತ್ರವು ವಿಮರ್ಶಕರಿಂದ ವ್ಯಾಪಕ ಪ್ರಶಂಸೆಯನ್ನು ಪಡೆಯಿತು ಮತ್ತು ವಾಣಿಜ್ಯಿಕ ಯಶಸ್ಸಾಯಿತು. ಈ ಚಿತ್ರವು ವಿಶ್ವಾದ್ಯಂತ ₹೯೬೯ ಕೋಟಿಯಷ್ಟು ಗಳಿಸಿತು.. ೬೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರದ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು. ೬೧ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ನಟ ಸೇರಿದಂತೆ ನಾಲ್ಕು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು, ಮತ್ತು ಫ಼ಿಲ್ಮ್‌ಫೇರ್ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಗೆದ್ದಿತು. ಚೈನಾದ ೨೦೧೫ರ ಡೂಬಾನ್ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿಯೂ ಇದು ಅತ್ಯುತ್ತಮ ವಿದೇಶಿ ಚಲನಚಿತ್ರಕ್ಕೆ ನಾಮನಿರ್ದೇಶನಗೊಂಡಿತು. == ಕಥಾವಸ್ತು == ಪಾಕಿಸ್ತಾನದ ಒಂದು ಸುಂದರವಾದ ಹಳ್ಳಿಯಾದ ಸುಲ್ತಾನಪುರದ ಬೆಟ್ಟಗಳ ಮಧ್ಯೆ ಆರು ವರ್ಷದ ಮೂಕ ಬಾಲಕಿ ಶಾಹಿದಾ ತನ್ನ ಹೆತ್ತವರೊಂದಿಗೆ ವಾಸಿಸುತ್ತಿರುತ್ತಾಳೆ. ಅವಳು ಮೂಕಿಯಾಗಿರುವುದರಿಂದ ಸಹಾಯಕ್ಕಾಗಿ ಕರೆಯಲು ಸಾಧ್ಯವಾಗದ ಒಂದು ಅಪಘಾತದ ನಂತರ, ಅದು ಅವಳ ಮಾತನ್ನು ಮತ್ತೆ ಬರಿಸುವುದೆಂದು ಭರವಸೆ ಹೊಂದಿ, ಆಕೆಯ ತಾಯಿ ರಸಿಯಾ ಭಾರತದ ದೆಹಲಿಯ ಸೂಫಿ ಸಂತ ನಿಜಾಮುದ್ದೀನ್ ಔಲಿಯಾರ ಸ್ಮಾರಕಕ್ಕೆ ಕರೆದೊಯ್ಯಲು ನಿರ್ಧರಿಸುತ್ತಾಳೆ. ಮನೆಗೆ ಹಿಂದಿರುಗುವಾಗ, ರೈಲು ರಿಪೇರಿಗಾಗಿ ನಿಲ್ಲುತ್ತದೆ ಮತ್ತು ತನ್ನ ತಾಯಿ ನಿದ್ದೆ ಮಾಡುತ್ತಿರುವಾಗ ಶಾಹಿದಾ ಕುರಿಮರಿಯನ್ನು ಉಳಿಸಲು ಇಳಿಯುತ್ತಾಳೆ. ಶಾಹಿದಾ ಪುನ್ನಃ ಹತ್ತುವ ಮುನ್ನ ರೈಲು ಹೊರಡುತ್ತದೆ. ಭಯಭೀತಳಾದ ಅವಳು ಒಂದು ಸರಕು ರೈಲನ್ನು ಹತ್ತುತ್ತಾಳೆ ಮತ್ತು ಕುರುಕ್ಷೇತ್ರದಲ್ಲಿ ಬಂದಿಳಿಯುತ್ತಾಳೆ. ಅಲ್ಲಿ ಅವಳು, ಪ್ರೀತಿಯಿಂದ ಬಜರಂಗಿ ಎಂದು ಕರೆಯಲ್ಪಡುವ ಪವನ್ ಕುಮಾರ್ ಚತುರ್ವೇದಿಯನ್ನು ಭೇಟಿಯಾಗುತ್ತಾಳೆ. ಅವನು ಧರ್ಮನಿಷ್ಠ ಹಿಂದೂ ಬ್ರಾಹ್ಮಣ ಮತ್ತು ಹನುಮಂತನ ಉತ್ಕಟ ಭಕ್ತನಾಗಿರುತ್ತಾನೆ. ಪವನ್ ತನ್ನ ತಂದೆಯ ಸ್ನೇಹಿತ ದಯಾನಂದ್ ಪಾಂಡೆಯ ಮನೆಯಲ್ಲಿ ವಾಸಿಸುತ್ತಿದ್ದು, ಅಲ್ಲಿ ದಯಾನಂದ್‍ನ ಮಗಳು ರಸಿಕಾಳೊಂದಿಗೆ ನಿಶ್ಚಿತಾರ್ಥವಾಗಿರುತ್ತದೆ. ಶಾಹಿದಾ ಎಲ್ಲಿ ವಾಸಿಸುತ್ತಾಳೆ ಎಂದು ಕಂಡುಹಿಡಿಯಲು ಅವನು ವ್ಯರ್ಥವಾಗಿ ಪ್ರಯತ್ನಿಸುತ್ತಾನೆ. ಅವನು ಅವಳನ್ನು "ಮುನ್ನಿ" ಎಂದು ಕರೆಯಲು ಪ್ರಾರಂಭಿಸಿ ಅವಳನ್ನು ಮನೆಗೆ ಕರೆತರುತ್ತಾನೆ. ಅವಳು ಬ್ರಾಹ್ಮಣಳಾಗಿರಬೇಕು ಎಂದು ಭಾವಿಸಿ ದಯಾನಂದ್ ಅವಳಿಗೆ ಉಳಿದುಕೊಳ್ಳಲು ಅನುವು ಮಾಡಿಕೊಡುತ್ತಾನೆ. ಆದರೆ, ಮುನ್ನಿ ಒಬ್ಬ ಪಾಕಿಸ್ತಾನಿ ಮುಸ್ಲಿಂ ಎಂದು ಕುಟುಂಬಕ್ಕೆ ಅಂತಿಮವಾಗಿ ತಿಳಿಯುತ್ತದೆ. ಕೋಪಗೊಂಡ ದಯಾನಂದ್ ಅವಳನ್ನು ಪಾಕಿಸ್ತಾನ ರಾಯಭಾರಿ ಕಚೇರಿಯ ಮೂಲಕ ಪಾಕಿಸ್ತಾನಕ್ಕೆ ಕಳುಹಿಸುವಂತೆ ಪವನ್‍ಗೆ ಆದೇಶಿಸುತ್ತಾನೆ. ಆದರೆ ಪ್ರತಿಭಟನೆಗಳಿಂದಾಗಿ ಕಚೇರಿಗಳನ್ನು ಮುಚ್ಚಿರಲಾಗಿರುತ್ತದೆ. ಒಬ್ಬ ಸ್ಥಳೀಯ ಪ್ರವಾಸ ಯೋಜಕನು ಮುನ್ನಿಯನ್ನು ಪಾಸ್ಪೋರ್ಟ್ ಇಲ್ಲದೆ ಪಾಕಿಸ್ತಾನಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡುತ್ತಾನೆ. ಆದರೆ ಬದಲಾಗಿ ಅವಳನ್ನು ಒಂದು ವೇಶ್ಯಾಗೃಹಕ್ಕೆ ಮಾರಲು ಪ್ರಯತ್ನಿಸುತ್ತಾನೆ. ಇದರಿಂದಾಗಿ ಪವನ್ ಕೋಪಗೊಳ್ಳುತ್ತಾನೆ. ಅವಳನ್ನು ರಕ್ಷಿಸಿದ ನಂತರ, ಪಾಸ್ಪೋರ್ಟ್ ಮತ್ತು ವೀಸಾ ಇಲ್ಲದಿದ್ದರೂ ಮುನ್ನಿಯನ್ನು ತಾನೇ ಅವಳ ಮನೆಗೆ ಕರೆದುಕೊಂಡು ಹೋಗುವುದಾಗಿ ಅವನು ಪ್ರತಿಜ್ಞೆ ಮಾಡುತ್ತಾನೆ. ಗಡಿಯ ಬೇಲಿಗಳ ಅಡಿಯಲ್ಲಿ ಪವನ್ ಮತ್ತು ಮುನ್ನಿಗೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದರೆ ಸ್ವಲ್ಪ ಸಮಯದ ನಂತರ, ಪವನ್ ಒಬ್ಬ ಭಾರತೀಯ ಗೂಢಚಾರನೆಂಬ ಅನುಮಾನದಡಿ ಅವರನ್ನು ಬಂಧಿಸಲಾಗುತ್ತದೆ. ವಿಚಾರಣೆಯ ವೇಳೆ, ಅವನು ಮುನ್ನಿಯೊಂದಿಗೆ ತಪ್ಪಿಸಿಕೊಂಡು, ಪಾಕಿಸ್ತಾನದ ಟೆಲಿವಿಷನ್ ಚಾನೆಲ್‌ನಲ್ಲಿ ಕೆಲಸ ಮಾಡುವ ಒಬ್ಬ ಪತ್ರಕರ್ತ ಚಾಂದ್ ನವಾಬ್‍ನನ್ನು ಭೇಟಿಯಾಗುತ್ತಾನೆ. ಅವನು ನಿಜವಾಗಿಯೂ ಭಾರತೀಯ ಗೂಢಚಾರನೆಂದು ಭಾವಿಸಿ ನವಾಬ್ ಪವನ್‍ನ ಪರಿಸ್ಥಿತಿಯನ್ನು ಅನುಸರಿಸುತ್ತಿರುತ್ತಾನೆ. ಆದರೆ ಮೂಕಿ ಮುನ್ನಿಯನ್ನು ಅವಳ ಹೆತ್ತವರೊಂದಿಗೆ ಮತ್ತೆ ಒಂದುಗೂಡಿಸುವ ಉದಾತ್ತ ಕಾರ್ಯಾದಲ್ಲಿರುವ ಪವನ್ ಸನ್ನಿವೇಶಗಳ ಬಲಿಪಶುಯಾಗಿದ್ದಾನೆ ಎಂದು ಕಂಡುಕೊಳ್ಳುತ್ತಾನೆ. ಅವನ ಕಥೆಯಿಂದ ಮನಕರಗಿ, ನವಾಬ್ ಮುನ್ನಿಯ ಹೆತ್ತವರನ್ನು ಹುಡುಕುವ ಪ್ರಯಾಣದಲ್ಲಿ ಅವನೊಂದಿಗೆ ಸೇರಿಕೊಳ್ಳುತ್ತಾನೆ. ಅವರಿಗೆ ಒಬ್ಬ ಇಸ್ಲಾಮೀ ಧಾರ್ಮಿಕ ವಿದ್ವಾಂಸನಾದ ಅಸದ್ ಎದುರಾಗುತ್ತಾನೆ. ಅವನು ಪೊಲೀಸರಿಂದ ಅವರು ಸೆರೆಯಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತಾನೆ. ಒಂದು ಕ್ಯಾಲೆಂಡರ್ ಫೋಟೋದಲ್ಲಿ ತನ್ನ ಊರಿಗೆ ಹೋಲುವ ಪ್ರದೇಶವನ್ನು ಮುನ್ನಿ ಗುರುತಿಸಿದ ನಂತರ ಅವನು ಗುಂಪನ್ನು ಆಜಾದ್ ಕಾಶ್ಮೀರಕ್ಕೆ ನಿರ್ದೇಶಿಸುತ್ತಾನೆ. ಏತನ್ಮಧ್ಯೆ, ಅವನು ತಪ್ಪಿಸಿಕೊಳ್ಳುವ ಪ್ರಯತ್ನಗಳು ಶೋಚನೀಯವಾಗಿ ವಿಫಲವಾದಾಗ, ನವಾಬ್‍ನ ಛಾಯಾಗ್ರಾಹಕ ಕಾಮಿಲ್ ಯೂಸುಫ್‍ನನ್ನು ಇನ್ಸ್ಪೆಕ್ಟರ್ ಆಮಿರ್ ಕುರೇಷಿ ಮತ್ತು ಪಾಕಿಸ್ತಾನದ ಹಿರಿಯ ಪೊಲೀಸ್ ಅಧಿಕಾರಿ ಹಮೀದ್ ಖಾನ್ ಬಂಧಿಸುತ್ತಾರೆ. ನವಾಬ್ ಇರುವ ಸ್ಥಳವನ್ನು ಪತ್ತೆಹಚ್ಚಲು ಅವರು ಅವನನ್ನು ಬಳಸಿಕೊಳ್ಳುತ್ತಾರೆ. ನವಾಬ್ ಅವರ ಪ್ರಯಾಣವನ್ನು ವೀಡಿಯೊದಲ್ಲಿ ದಾಖಲಿಸುತ್ತಾನೆ. ಆದರೆ ಅದು ನಿಷ್ಪ್ರಯೋಜಕ ಕಥೆ ಎಂದು ಭಾವಿಸಿ, ಅವನ ಮೇಲಧಿಕಾರಿ ಅದನ್ನು ಪ್ರಸಾರ ಮಾಡಲು ನಿರಾಕರಿಸುತ್ತಾನೆ. ನವಾಬ್ ಯೂಟ್ಯೂಬ್‍ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡುತ್ತಾನೆ. ಸ್ಮಾರಕವೊಂದರಲ್ಲಿ ತಂಡವನ್ನು ಗಮನಿಸಿದಾಗ, ಪವನ್‍ನನ್ನು ಜೀವಂತವಾಗಿ ಸೆರೆಹಿಡಿಯಲು ಕಾಮಿಲ್‍ನನ್ನು ಪೊಲೀಸರು ಬಲಿಪಶು ಮಾಡುತ್ತಿದ್ದಾರೆ ಎಂದು ಆ ಪ್ರಕ್ರಿಯೆಯಲ್ಲಿ ಕಂಡುಕೊಳ್ಳುತ್ತಾನೆ. ತುಣುಕನ್ನು ಪರಿಶೀಲಿಸುವಾಗ, ಮುನ್ನಿಯು ಹಿನ್ನೆಲೆಯಲ್ಲಿ ತನ್ನ ತಾಯಿ ಬಸ್‌ನಿಂದ ಇಳಿಯುತ್ತಿರುವುದನ್ನು ಗುರುತಿಸುತ್ತಾಳೆ. ಆ ಮೂವರು ಬಸ್ ನಿಲ್ದಾಣಕ್ಕೆ ಹೋಗಿ ಕೊನೆಗೆ ಸುಲ್ತಾನ್‍ಪುರವು ಮುನ್ನಿಯ ಊರು ಎಂದು ಗುರುತಿಸುತ್ತಾರೆ. ಅವರು ಬಸ್ ಹತ್ತುತ್ತಾರೆ. ಆದರೆ "ಭಾರತೀಯ ಪತ್ತೇದಾರ"ನನ್ನು ಹುಡುಕುತ್ತಿರುವ ಪೊಲೀಸರು ಅವರನ್ನು ನಿಲ್ಲಿಸುತ್ತಾರೆ. ಒಂದು ಯೋಜನೆಯನ್ನು ರೂಪಿಸಿ, ಪವನ್ ಬಸ್ಸಿನಿಂದ ಇಳಿದು ಕಾಡಿನ ಕಡೆಗೆ ಓಡುತ್ತಾನೆ. ನವಾಬ್ ಮತ್ತು ಮುನ್ನಿ ಇನ್ನೊಂದು ಬದಿಯಲ್ಲಿ ತಪ್ಪಿಸಿಕೊಳ್ಳುತ್ತಾರೆ. ಪವನನ್ನು ಸೆರೆಹಿಡಿದು ಅವನ ತೋಳಿಗೆ ಗುಂಡು ಹಾರಿಸಲಾಗುತ್ತದೆ. ಏತನ್ಮಧ್ಯೆ, ನವಾಬ್ ಮತ್ತು ಮುನ್ನಿ ಸುಲ್ತಾನ್‍ಪುರವನ್ನು ತಲುಪುತ್ತಾರೆ. ಅಲ್ಲಿ ಮುನ್ನಿ ಅಂತಿಮವಾಗಿ ತನ್ನ ಹೆತ್ತವರೊಂದಿಗೆ ಮತ್ತೆ ಸೇರುತ್ತಾಳೆ. ನವಾಬ್ ಅಪ್‌ಲೋಡ್ ಮಾಡಿದ ವೀಡಿಯೊಗಳು ಭಾರತ ಮತ್ತು ಪಾಕಿಸ್ತಾನದಾದ್ಯಂತ ವೈರಲ್ ಆಗಿ ಭಾವನಾತ್ಮಕವಾಗಿ ಅನೇಕರ ಮನಕರಗಿಸುತ್ತವೆ. ಅವನ ಕಥೆಯನ್ನು ಪರಿಶೀಲಿಸಿದ ನಂತರ ಪವನ್ ನಿರಪರಾಧಿ ಎಂದು ಸಹಾನುಭೂತಿಯುಳ್ಳ ಹಮೀದ್‍ಗೆ ಅರಿವಾಗುತ್ತದೆ ಮತ್ತು ಅವನನ್ನು ಜೈಲಿನಲ್ಲಿರಿಸಬೇಕೆಂಬ ತನ್ನ ಮುಖ್ಯಸ್ಥನ ಆದೇಶವನ್ನು ಧಿಕ್ಕರಿಸಿ ಬಿಡುಗಡೆ ಮಾಡುತ್ತಾನೆ. ನವಾಬ್ ಬೆಂಬಲಕ್ಕಾಗಿ ಕರೆ ನೀಡುತ್ತಾನೆ ಮತ್ತು ಸಾವಿರಾರು ಪಾಕಿಸ್ತಾನಿಗಳು ಹಾಗೂ ಭಾರತೀಯರು ನರೋವಾಲ್ ತಪಾಸಣಾ ನೆಲೆಯಲ್ಲಿ ಸೇರುತ್ತಾರೆ. ಅಲ್ಲಿಂದ ಪವನ್ ಭಾರತಕ್ಕೆ ಮರಳುವುದಿರುತ್ತದೆ. ಪವನ್ ಗಡಿ ದಾಟುತ್ತಿದ್ದಂತೆ, ಮುನ್ನಿಯ ನಿಜವಾದ ಹೆಸರು ಶಾಹಿದಾ ಎಂದು ನವಾಬ್ ಬಹಿರಂಗಪಡಿಸುತ್ತಾನೆ. ಜನಸಂದಣಿಯಲ್ಲಿರುವ ಶಾಹಿದಾ ಕೂಡ ಬೇಲಿಯ ಕಡೆಗೆ ಓಡುತ್ತಾಳೆ ಮತ್ತು ಸ್ವಲ್ಪ ಪ್ರಯತ್ನದ ನಂತರ, ಪವನ್‍ನ ಗಮನ ಸೆಳೆಯಲು ತನ್ನ ಮೊದಲ ಮಾತನ್ನು ಕೂಗುತ್ತಾಳೆ: "ಮಾಮಾ " (ಚಿಕ್ಕಪ್ಪ). ಪವನ್ ಅವಳ ಧ್ವನಿಯನ್ನು ಕೇಳುತ್ತಾನೆ, ಮತ್ತು ಇಬ್ಬರು ಪರಸ್ಪರರತ್ತ ಓಡುತ್ತಾರೆ. ಪುನರ್ಮಿಲನವಾಗಿ ಪವನ್ ಶಾಹಿದಾಳನ್ನು ಗಾಳಿಯಲ್ಲಿ ಎತ್ತರಕ್ಕೆ ಎಸೆಯುತ್ತಾನೆ. == ಪಾತ್ರವರ್ಗ == ಪವನ್ ಕುಮಾರ್ ಚತುರ್ವೇದಿ ಪಾತ್ರದಲ್ಲಿ ಸಲ್ಮಾನ್ ಖಾನ್ ಶಾಹಿದಾ 'ಮುನ್ನಿ' ರೌಫ್ ಅಲಿ ಖಾನ್ ಪಾತ್ರದಲ್ಲಿ ಹರ್ಷಾಲಿ ಮಲ್ಹೋತ್ರಾ ಚಾಂದ್ ನವಾಬ್ ಪಾತ್ರದಲ್ಲಿ ನವಾಜ಼ುದ್ದೀನ್ ಸಿದ್ದೀಕಿ ರಸಿಕಾ ಪಾಂಡೆ ಪಾತ್ರದಲ್ಲಿ ಕರೀನಾ ಕಪೂರ್ ಖಾನ್ ರಸಿಯಾ ರೌಫ್ ಅಲಿ ಖಾನ್ ಪಾತ್ರದಲ್ಲಿ ಮೆಹೆರ್ ವಿಜ್ ಕಾಮಿಲ್ ಯೂಸುಫ್ ಪಾತ್ರದಲ್ಲಿ ಕುಶಾಲ್ ಪವಾರ್ ರೌಫ್ ಅಲಿ ಖಾನ್ ಪಾತ್ರದಲ್ಲಿ ಮೀರ್ ಸರ್ವಾರ್ ವಿಶೇಷ ಪಾತ್ರದಲ್ಲಿ ಕಮಲೇಶ್ ಗಿಲ್ ಮೌಲಾನಾ ಆಜ಼ಾದ್ ಪಾತ್ರದಲ್ಲಿ ಓಂ ಪುರಿ ದಯಾನಂದ್ ಪಾಂಡೆ ಪಾತ್ರದಲ್ಲಿ ಶರತ್ ಸಕ್ಸೇನಾ ಸುಶೀಲಾ ದಯಾನಂದ್ ಪಾಂಡೆ ಪಾತ್ರದಲ್ಲಿ ಅಲ್ಕಾ ಕೌಶಲ್ ಅತಿಥಿ ಪಾತ್ರದಲ್ಲಿ ಅದ್ನಾನ್ ಸಾಮಿ ಹಮೀದ್ ಖಾನ್ ಪಾತ್ರದಲ್ಲಿ ರಾಜೇಶ್ ಶರ್ಮಾ ವರ್ಧನ್ ಪಾತ್ರದಲ್ಲಿ ಕ್ರುನಾಲ್ ಪಂಡಿತ್ ಬೂ ಅಲಿ ಪಾತ್ರದಲ್ಲಿ ಮುರ್ಸಲೀನ್ ಕುರೇಷಿ ಆಮಿರ್ ಕುರೇಷಿ ಪಾತ್ರದಲ್ಲಿ ಮನೋಜ್ ಬಕ್ಷಿ ಶಂಶೇರ್ ಅಲಿ ಪಾತ್ರದಲ್ಲಿ ಹರ್ಷ್ ಎ. ಸಿಂಗ್ ಎನ್‌ಡಿಟಿವಿ ವರದಿಗಾರನಾಗಿ ಯುಧ್‍ವೀರ್ ದಹಿಯಾ == ತಯಾರಿಕೆ == === ಬೆಳವಣಿಗೆ === ಚಿತ್ರದ ಕಲ್ಪನೆಗೆ 1987 ರ ತೆಲುಗು ಚಲನಚಿತ್ರ ಪಾಸಿವಾಡಿ ಪ್ರಾಣಂ ಸ್ಫೂರ್ತಿಯಾಯಿತು ಎಂದು ಚಿತ್ರದ ಸಹ-ಬರಹಗಾರರಾದ ಕೆ.ವಿ.ವಿಜಯೇಂದ್ರ ಪ್ರಸಾದ್ ಹೇಳಿದರು. ಒಬ್ಬ ಪಾಕಿಸ್ತಾನಿ ದಂಪತಿ ತಮ್ಮ ಮಗಳ ಹೃದಯದ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ಬರುವ ಬಗ್ಗೆ ಕೇಳಿದ ಕಥೆಯಿಂದಲೂ ಪ್ರಸಾದ್ ಸ್ಫೂರ್ತಿ ಪಡೆದರು. ಕಬೀರ್ ಖಾನ್ ಬಜರಂಗಿ ಭಾಯಿಜಾನ್‍ನ ತಮ್ಮ ಚಿತ್ರಕಥೆಗೆ ತಮ್ಮದೇ ಆದ ಕೆಲವು ಅನುಭವಗಳಿಂದ ಪ್ರಭಾವಿತರಾದರು ಎಂದು ಗಮನಿಸಿದರು. ಬಾಲ್ಯದಲ್ಲಿಯೇ ಹಿಂದೂ ಮಹಾಕಾವ್ಯ ರಾಮಾಯಣ ಆಧಾರಿತ ರಾಮ್‌ಲೀಲಾ ನಾಟಕಗಳನ್ನು ನೋಡುತ್ತಿದ್ದ, ಮತ್ತು ವಿಶೇಷವಾಗಿ ಹಿಂದೂ ದೇವತೆ ಬಜರಂಗಿ (ಹನುಮಂತ) ತಮ್ಮ ಬಾಲ್ಯದಲ್ಲಿ ತಮ್ಮ ಮೇಲೆ ಬಲವಾದ ಪ್ರಭಾವ ಬೀರಿದವು ಎಂದು ಅವರು ಗಮನಿಸಿದರು. 1980ರ ದಶಕದಿಂದ ಭಾಗಶಃ ಧಾರ್ಮಿಕ ಪಂಥೀಯತೆಯ ಏರಿಕೆಗೆ ಪ್ರತಿಕ್ರಿಯೆಯಾಗಿ, ಮತ್ತು ವಿಶೇಷವಾಗಿ ಬಜರಂಗಿಯನ್ನು ಹಿಂಸಾತ್ಮಕ ಪಂಥೀಯ ಉದ್ದೇಶಗಳಿಗೆ ಬಳಸಿಕೊಂಡ ಮತ್ತು ಪ್ರಾಣಾಂತಿಕ 2002 ರ ಗುಜರಾತ್ ಗಲಭೆಗಳಲ್ಲಿ ಕೇಂದ್ರ ಪಾತ್ರವನ್ನು ವಹಿಸಿ ಬಜರಂಗಿ ಹೆಸರು ಮತೀಯ ಅರ್ಥ ಹೊಂದಲು ಕಾರಣವಾದ ಒಂದು ಹಿಂದೂ ಮೂಲಭೂತವಾದಿ ಸಂಸ್ಥೆಯಾದ ಬಜರಂಗ ದಳಕ್ಕೆ ಪ್ರತಿಕ್ರಿಯೆಯಾಗಿ ಬಜರಂಗಿ ಭಾಯಿಜಾನ್‍ನನ್ನು ಬರೆಯಲು ಖಾನ್ ಪ್ರಾರಂಭಿಸಿದರು. ಎಲ್ಲ ಸಮುದಾಯಗಳಿಗೆ ಭಜರಂಗಿಯನ್ನು ಪುನಃ ಪಡೆದುಕೊಳ್ಳುವ ಮಾರ್ಗವಾಗಿ ಮತ್ತು ಹಿಂದೂಗಳು ಮತ್ತು ಮುಸ್ಲಿಮರನ್ನು ಒಟ್ಟಿಗೆ ಸೇರಿಸುವ ಮಾರ್ಗವಾಗಿ 2013 ರಲ್ಲಿ ಅವರು ಬಜರಂಗಿ ಭಾಯಿಜಾನ್ನನ್ನು ಬರೆಯಲು ಪ್ರಾರಂಭಿಸಿದರು. === ಪ್ರಧಾನ ಛಾಯಾಗ್ರಹಣ === ಪ್ರಧಾನ ಛಾಯಾಗ್ರಹಣವು 3 ನವೆಂಬರ್ 2014 ರಂದು ನವದೆಹಲಿಯಲ್ಲಿ ಪ್ರಾರಂಭವಾಯಿತು. ಎರಡನೇ ಚಿತ್ರೀಕರಣ ವೇಳಾಪಟ್ಟಿ ಕರ್ಜತ್‌ನ ಎನ್‌ಡಿ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರದ ಮೂರನೇ ವೇಳಾಪಟ್ಟಿ ರಾಜಸ್ಥಾನದ ಮಂಡಾವಾದಲ್ಲಿ ನಡೆಯಿತು. ಚಿತ್ರದ ಚಿತ್ರೀಕರಣ ಮೇ 20 ರಂದು ಪೂರ್ಣಗೊಂಡಿತು. ಚಿತ್ರದ ಕೆಲವು ದೃಶ್ಯಗಳನ್ನು ಖಾನ್‌ನ ಪನ್ವೆಲ್ ತೋಟದ ಮನೆಯಲ್ಲಿ ಚಿತ್ರೀಕರಿಸಲಾಯಿತು. ಕಾಶ್ಮೀರ ಕಣಿವೆಯ ಸೋನ್‍ಮಾರ್ಗ್ ಮತ್ತು ಜ಼ಾಜಿ ಲಾ ಮುಂತಾದ ಸ್ಥಳಗಳಲ್ಲಿಯೂ ಚಿತ್ರೀಕರಣ ನಡೆಯಿತು. ನವಾಜ಼ುದ್ದೀನ್ ಸಿದ್ದೀಕಿಯ ಪಾತ್ರವಾದ ಚಾಂದ್ ನವಾಬ್ ನೈಜ ಪಾತ್ರನಾದ ಚಾಂದ್ ನವಾಬ್‍ನಿಂದ ಸ್ಫೂರ್ತಿ ಪಡೆದಿತ್ತು. == ಸಂಗೀತ == ಈ ಧ್ವನಿಸುರುಳಿ ಸಂಗ್ರಹದ ಧ್ವನಿವಾಹಿನಿಯನ್ನು ಪ್ರೀತಮ್ ಸಂಯೋಜಿಸಿದ್ದಾರೆ. ಮಯೂರ್ ಪುರಿ, ಅಮಿತಾಭ್ ಭಟ್ಟಾಚಾರ್ಯ, ನೀಲೇಶ್ ಮಿಶ್ರಾ, ಶಬ್ಬೀರ್ ಅಹ್ಮದ್, ಮತ್ತು ಕೌಸರ್ ಮುನೀರ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದ ಧ್ವನಿವಾಹಿನಿಯು ಸೂಪರ್ ಹಿಟ್ ಆಯಿತು.ಧ್ವನಿವಾಹಿನಿ ಸುರುಳಿ ಸಂಗ್ರಹವು ಹನ್ನೊಂದು ಹಾಡುಗಳನ್ನು ಒಳಗೊಂಡಿದ್ದು 17 ಜೂನ್ 2015 ರಂದು ಬಿಡುಗಡೆಯಾಯಿತು. === ಹಾಡುಗಳ ಪಟ್ಟಿ === == ಬಿಡುಗಡೆ == ಬಜರಂಗಿ ಭಾಯಿಜಾನ್ 17 ಜುಲೈ 2015 ರಂದು ಬಿಡುಗಡೆಯಾಯಿತು. 6 ಅಕ್ಟೋಬರ್ 2015 ರಂದು 20 ನೇ ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಜರಂಗಿ ಭಾಯಿಜಾನ್ ಪ್ರಥಮ ಪ್ರದರ್ಶನ ಕಂಡಿತು. ಈ ಚಿತ್ರವು ಚೈನಾದಲ್ಲಿ 2 ಮಾರ್ಚ್ 2018 ರಂದು ಬಿಡುಗಡೆಯಾಯಿತು. ಈ ಚಿತ್ರವು ಟರ್ಕಿಯಲ್ಲಿ 17 ಆಗಸ್ಟ್ 2018 ರಂದು ಬಿಡುಗಡೆಯಾಯಿತು. ಈ ಚಿತ್ರವು ಜನವರಿ ೧೮ 2019ರಂದು ಜಪಾನ್‍ನಲ್ಲಿ ಬಿಡುಗಡೆಯಾಯಿತು. == ಬಾಕ್ಸ್ ಆಫ಼ಿಸ್ == ಚೈನಾದಲ್ಲಿ ಬಿಡುಗಡೆಯಾಗುವ ಮುನ್ನ ಈ ಚಿತ್ರದ ವಿಶ್ವಾದ್ಯಂತ ಗಳಿಕೆ ₹626 ಕೋಟಿಯಷ್ಟು ಆಗಿತ್ತು. === ಭಾರತ === ಬಜರಂಗಿ ಭಾಯಿಜಾನ್ ಚಿತ್ರದ ಅಂತಿಮ ದೇಶೀಯ ಗಳಿಕೆ ₹೪೪೪.೯೨ ಕೋಟಿಯಷ್ಟಾಗಿತ್ತು. === ವಿದೇಶದಲ್ಲಿ === ಅಮೇರಿಕ ಮತ್ತು ಕೆನಡಾದಲ್ಲಿ ಅಂತಿಮ ಗಳಿಕೆ $ 8.187 ದಶಲಕ್ಷದಷ್ಟಿತ್ತು. ಹಾಂಗ್ ಕಾಂಗ್‍ನಲ್ಲಿ, ಈ ಚಿತ್ರವು 2016 ರಲ್ಲಿ ಎಚ್‍ಕೆ$1,364,088 ಯಷ್ಟು ಗಳಿಸಿತು. ಚೀನಾದಲ್ಲಿ ಬಿಡುಗಡೆಯಾದ 26 ದಿನಗಳ ನಂತರ, ಈ ಚಿತ್ರವು ಸಾಗರೋತ್ತರ ಮಾರುಕಟ್ಟೆಗಳಿಂದ ₹ 500 ಕೋಟಿಗೂ ಹೆಚ್ಚು ಹಣವನ್ನು ಗಳಿಸಿತು. ==== ಚೈನಾ ==== ಬಿಡುಗಡೆಯಾದ 31 ದಿನಗಳಲ್ಲಿ, ಈ ಚಿತ್ರವು ಚೈನಾದಲ್ಲಿ ಒಟ್ಟು $48 ದಶಲಕ್ಷದಷ್ಟು ಗಳಿಸಿತು (₹ 313 ಕೋಟಿ). == ಗೌರವಗಳು == ಗೆಲುವುಗಳು ೬೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ - ಸಲ್ಮಾನ್ ಖಾನ್, ರಾಕ್‍ಲೈನ್ ವೆಂಕಟೇಶ್, ಕಬೀರ್ ಖಾನ್ ೬೧ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು - ಅತ್ಯುತ್ತಮ ಕಥೆ - ಕೆ. ವಿ. ವಿಜಯೇಂದ್ರ ಪ್ರಸಾದ್ ನಾಮನಿರ್ದೇಶನಗಳು ೬೧ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ಚಲನಚಿತ್ರ - ಸಲ್ಮಾನ್ ಖಾನ್, ರಾಕ್‍ಲೈನ್ ವೆಂಕಟೇಶ್ ಅತ್ಯುತ್ತಮ ನಿರ್ದೇಶಕ - ಕಬೀರ್ ಖಾನ್ ಅತ್ಯುತ್ತಮ ನಟ - ಸಲ್ಮಾನ್ ಖಾನ್ == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಟೆಂಪ್ಲೇಟು: ಬಜರಂಗಿ ಭಾಯಿಜಾನ್ ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಬಜರಂಗಿ ಭಾಯಿಜಾನ್ (ಚಲನಚಿತ್ರ) ಟೆಂಪ್ಲೇಟು: